ಬಿಜಾಪುರ : ಒರ್ವ ಮತದಾರನೊಬ್ಬ ಮತಗಟ್ಟೆಯ ವರೆಗೆ ತೆರಳಿ, ತನ್ನ ಹೆಸರು ಮತ್ತು ಭಾವಚಿತ್ರ ಗರುತಿನ ಪತ್ರ ಹಾಗೂ ಚುನಾವಣಾ ಆಯೋಗದ ಗುರತಿನ ಪತ್ರದಲ್ಲಿನ ಹೆಸರು ಒಂದೇ ಆಗಿದ್ದರೂ, ಐಡಿ ನಂ. ಹೋಲಿಕೆಯಾಗದ ಕಾರಣ ಮತ ಹಾಕದೆ ನಿರಾಸೆಯಿಂದ ಮನೆಗೆ ಮರಳಿದ ಘಟನೆ ಬಿಜಾಪುರ ನಗರದಲ್ಲಿ ನಡೆದಿದೆ.
ಇಲ್ಲಿನ ಶಾಂತಿ ನಗರದ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ. 29 ರಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಶಂಕರ ಏಗಪ್ಪ ಹೊನ್ನಳ್ಳಿ ಇವರ ಭಾವಚಿತ್ರ ಹಾಗೂ ಐಡಿ ನಂ. ಇರುವ ಚುನಾವಣಾ ಗುರುತಿನ ಪತ್ರ ಮತ್ತು ಕ್ರಮ ಸಂಖ್ಯೆ ಇರುವ ಗುರುತಿನ ಚೀಟಿಗೂ ಹೋಲಿಕೆ ಆಗಿಲ್ಲ. ಪರಿಣಾಮ ಚುನಾವಣಾ ಸಿಬ್ಬಂದಿ ಮತದಾನಕ್ಕೆ ಅವಕಾಶ ನೀಡದ ಕಾರಣ ಶಂಕರ ಹೊನ್ನಳ್ಳಿ ಮನೆಗೆ ಮರಳಿ ತನ್ನ ಕಾಯಕದಲ್ಲಿ ತೊಡಗಿ ಸಹ ಮತದಾರರಿಗೆ ತನಗಾದ ಅನುಭವ ವಿವರಿಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ.
ನಾನು ಈ ಹಿಂದೆ ವಿಧಾನ ಸಭೆ ಚುನಾವಣೆಯಲ್ಲಿ ಮತ ಹಾಕಿದ್ದೇನೆ. ಆದರೆ ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಮತದಾನ ಮಾಡಬೇಕು ಎಂಬ ಉತ್ಕಟ ಹಂಬಲ ಇತ್ತು. ಆದರೆ ಅವಕಾಶ ಸಿಗದ ಕಾರಣ ನಿರಾಸೆಯಿಂದ ಮರಳಿದೆ ಎಂದು ಮಾದ್ಯಮಕ್ಕೆ ತಿಳಿಸಿದ್ದಾರೆ.