ಬಿಜಾಪುರ: ಜಿಲ್ಲೆಯಲ್ಲಿ ಇಲ್ಲಿನ ಮೀಸಲು ಲೋಕಸಭಾ ಚುನಾವಣೆಯ ಚಟುವಟಿಕೆಗಳು ಗರಿಗೆದರಿವೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹಾಗೂ ಕಾಂಗ್ರೇಸ್ ಅಭ್ಯರ್ಥಿ ರಾಜು ಆಲಗೂರ ನಡುವೆ ನೇರ ಫೈಟ್ ಏರ್ಪಟ್ಟಿದೆ. ನಾಮಪತ್ರ ಸಲ್ಲಿಕೆಯಲ್ಲೆ ಪೈಪೋಟಿ ನಡೆದಂತಿದೆ. ಬಿಜೆಪಿ – ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಒಂದು ಬಾರಿ ನಾಮಪತ್ರ ಸಲ್ಲಿಸಿದರೆ, ಕಾಂಗ್ರೇಸ್ ಪಕ್ಷದ ಅಭ್ಯರ್ಥಿ 3 ಬಾರಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಯ ಆರಂಭದ ದಿನದಂದೆ ರಾಜು ಆಲಗೂರ ಮೊದಲ ನಾಮಪತ್ರ ಸಲ್ಲಿಸಿದರೆ, ಸೋಮವಾರ 2 ಬಾರಿ ಅಪಾರ ಬೆಂಬಲಿಗರೊoದಿಗೆ ನಾಮತ್ರ ಸಲ್ಲಿಸಿದ್ದಾರೆ. ಅದರ ಮೇಲೆ ಮತ್ತೆ 3 ನೇ ಬಾರಿ ಇಂದು (ಗುರುವಾರದಂದು) ನಾಮಪತ್ರ ಸಲ್ಲಿಸಿ, ಜಿಗಜಿಣಗಿ ಸೋಲಿಸಲು ಪ್ರಬಲ ಪ್ರತಿರೋಧ ಒಡ್ಡಿದ್ದಾರೆ.
ಅತ್ತ ಈ ಹಿಂದೆ ಸಂಸದರಾಗಿ ಆಯ್ಕೆಯಾದ ಸಂಸದ ಮೈತ್ರಿ ಪಕ್ಷದ ಅಭ್ಯರ್ಥಿ ರಮೇಶ ಜಿಗಜಿಣಗಿ ಒಂದು ಬಾರಿ ಮಾತ್ರ ಕಳೆದ ಮಂಗಳವಾರದoದು ತಮ್ಮ ಅಪಾರ ಬೆಂಬಲಿಗರೊoದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ಇತ್ತ ಇಲ್ಲಿನ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿ ಪ್ರೊ.ರಾಜು ಆಲಗೂರ ಇಂದು (ಗುರುವಾರ) ಇನ್ನೊಂದು ಪ್ರತಿ ನಾಪಪತ್ರ ಸಲ್ಲಿಸಿದರು.
ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ತಮ್ಮ ಉಮೇದುವಾರಿಕೆಯನ್ನು ದಾಖಲಿಸಿದರು. ಸೂಚಕರಾಗಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಹಿರಿಯ ಮುಖಂಡರಾದ ಡಿ.ಎಲ್. ಚವ್ಹಾಣ ಹಾಗೂ ನಿಂಗಪ್ಪ ಪೂಜಾರಿ ಇದ್ದರು.
ಈ ಮೂಲಕ ಬರಪೀಡಿತ ಬಿಜಾಪುರ ಜಿಲ್ಲೆಯಲ್ಲಿ ಬಿರು ಬಿಸಿಲಿನ ಕಾವಿನಷ್ಟೆ ಚುನಾವಣೆಯ ಕಾವು ಏರತೊಡಗಿದೆ. ಈ ಹಿಂದೆ ಏಕಾಂಗಿಯಾಗಿ ಪೈಪೋಟಿ ಒಡ್ಡಿದ ಬಿಜೆಪಿ ಈ ಬಾರಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಸಾಧಿಸಿ ಸಂಸದ ರಮೇಶ ಜಿಗಜಿಣಗಿ ಅವರನ್ನು ಕಣಕ್ಕೆ ಇಳಿಸಿದೆ.
ಆದರೆ ಲಂಬಾಣಿ ಜನಾಂಗದ ಪ್ರಭಾವಿ ನಾಯಕ ಪ್ರಕಾಶ ರಾಠೋಡ ಅವರನ್ನು ಈ ಹಿಂದೆ ಕಣಕ್ಕೆ ಇಳಿಸಿದ್ದ ಕಾಂಗ್ರೇಸ್ ಈ ಬಾರಿ ತನ್ನ ಹುರಿಯಾಳುವನ್ನು ಬದಲಾಯಿಸಿದೆ. ಪ್ರಕಾಶ ರಾಠೋಡ ಬದಲಾಗಿ ಮಾಜಿ ಶಾಸಕ ದಲಿತ ಸಮಾಜದ ಪ್ರಭಾವಿ ನಾಯಕ ಪ್ರೊ. ರಾಜು ಆಲಗೂಲ ಅವರನ್ನು ಕಣಕ್ಕೆ ಇಳಿಸಿ ಪ್ರಬಲ ಪೈಪೋಟಿ ಒಡ್ಡಿದೆ.
ಜಿಲ್ಲೆಯಲ್ಲಿ ಬರುವ ಮೇ.7 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮತದಾರರು ಈ ಬಾರಿ ಯಾರಿಗೆ ಮಣೆಹಾಕಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
ವರದಿ: ಮ.ವಿ. ಹೂಗಾರ.