ಚಡಚಣ: ಹೊರರಾಜ್ಯದಿಂದ ಅಕ್ರಮವಾಗಿ ಗಾಂಜಾ ಹಾಗೂ ಅಫೀಮು ಸರಬರಾಜು ಆಗುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ಸಮೀಪದ ಶಿರಾಡೋಣ ಅಬಕಾರಿ ತನಿಖಾ ಠಾಣೆಯ ಬಳಿ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಹಾಗೂ ಅಫೀಮು ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ.
ದೆಹಲಿ ಮೂಲದ ಬಸೀರಅಹ್ಮದ ರಮಜಾನ ಭಟ ಎಂಬ ವ್ಯಕ್ತಿಯು ಸುಮಾರು 3 ಲಕ್ಷ 38 ಸಾವಿರ ರೂ. ಮೌಲ್ಯದ 30 ಕೆ.ಜಿ. ಅಫೀಮು ಹಾಗೂ 10 ಕೆ.ಜಿ. ಗಾಂಜಾವನ್ನು ಟ್ರಕ್ಕಿನಲ್ಲಿ ಸಾಗಿಸುತ್ತಿದ್ದಾಗ ಅಧಿಕಾರಿಗಳು ದಾಳಿ ಮಾಡಿ, ಮಾದಕ ವಸ್ತುವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಎಲ್.ಎಸ್. ಸಲಗರ, ಅಬಕಾರಿ ನಿರೀಕ್ಷಕರಾದ ಪ್ರವೀಣ ರಂಗಸುಬೆ, ಸಿದ್ದಪ್ಪ ಯರಗಟ್ಟಿ ಹಾಗೂ ಸಿಬ್ಬಂದಿಗಳಾದ ಮೃತ್ಯುಂಜಯ ಜಕಾತಿ, ಅಶೋಕ ಗೊಣಸಗಿ, ಶಿವಾನಂದ ಕೊಡತೆ ಹಾಗೂ ಮತ್ತಿತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.