ಬಿಜಾಪುರ: ತಾಲೂಕಿನ ಲಚ್ಯಾಣದಲ್ಲಿ ಆಳವಾದ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡ ಸಾತ್ವಿಕ್ ಕೊನೆಗೂ ಬದುಕುಳಿದ ಹಿನ್ನಲೆ ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಗುರುವಾರದಂದು ಸ್ಥಳಿಯ ಆರಾದ್ಯದೇವ ಕಮರಿಮಠದ ಶ್ರೀ ಸಿದ್ದಲಿಂಗ ಮಹಾರಾಜರ ಸನ್ನಿಧಿಯಲ್ಲಿ ಧೀರ್ಘದಂಡ ನಮಸ್ಕಾರ ಸಲ್ಲಿಸಿ ಹೊತ್ತ ಹರಕೆ ತೀರಿಸಿದರು.
ಅತ್ತ ಮಗು ಬದುಕುಳಿದ ಸಂಗತಿ ತಿಳಿಯುತ್ತಿದ್ದಂತೆ ಇದರಿಂದ ಸಂತಸಗೊoಡ ಕಾಸುಗೌಡ ಬಿರಾದಾರ ಕೂಡಲೇ ಶ್ರೀ ಸಿದ್ಧಲಿಂಗ ಮಹಾರಾಜರ ಕಮರಿಮಠಕ್ಕೆ ಬಂದು ದೀರ್ಘದಂಡ ನಮಸ್ಕಾರ ಮೂಲಕ ಪ್ರದಕ್ಷಿಣೆ ಹಾಕಿ ಸಿದ್ಧಿ ಪುರುಷ ಸಿದ್ಧಲಿಂಗ ಮಹಾರಾಜರ ಗರ್ಭ ಗುಡಿ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.
ಸಾತ್ವಿಕ್ ಕೊಳವೆ ಬಾವಿಗೆ ಬಿದ್ದ ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ವೀಕ್ಷಿಸಿದರು. ಬಳಿಕ ಇದೇ ದಿನ ಬುಧವಾರ ಮಧ್ಯರಾತ್ರಿ ನೇರವಾಗಿ ಸಮೀಪದ ಶ್ರೀ ಸಿದ್ಧಲಿಂಗ ಮಹಾರಾಜರ ದರ್ಶನ ಪಡೆದು ಕರ್ಪೂರಾರತಿ ಬೆಳಗಿ ಮಗುವಿನ ರಕ್ಷಣೆಗಾಗಿ ಪ್ರಾರ್ಥಿಸುತ್ತಾ ಲಚ್ಯಾಣ ಸಿದ್ಧಲಿಂಗೇಶ ನೀನು ಪವಾಡ ಪುರುಷ, ನಿನ್ನ ಕ್ಷೇತ್ರದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಕೊಳವೆ ಬಾವಿಯಲ್ಲಿ ಬಿದ್ದ ಮಗು ನಿನ್ನ ಮಗು. ಆ ಮಗುವನ್ನು ರಕ್ಷಿಸುವ ಶಕ್ತಿ ನಿನಗಿದೆ, ಬೇರೆ ಯಾರಿಗೂ ಸಾಧ್ಯವಿಲ್ಲ. ನೀನು ಆ ಮುದ್ದು ಕಂದಮ್ಮನನ್ನು ರಕ್ಷಿಸಿದರೆ ನೀನಗೆ ಧೀರ್ಘದಂಡ ನಮಸ್ಕಾರ ಹಾಕುವೆ ಎಂದು ಸದ್ದಿಲ್ಲದೆ ಹರಕೆ ಹೊತ್ತು ಘಟನಾ ಸ್ಥಳಕ್ಕೆ ಧಾವಿಸಿದ್ದರು.
ಪವಾಡವೆಂಬoತೆ ಸಾವು ಬದುಕಿನ ಹೋರಾಟದ ನಡುವೆ ಮಗು ಸಾತ್ವಿಕ್ ಬದುಕಿಬಂದ ಪರಿಣಾಮ ಸಂತಸಗೊoಡ ಕಾಸುಗೌಡ ಕೂಡಲೆ ಮಠಕ್ಕೆ ಧಾವಿಸಿ ಹೊತ್ತ ಹರಕೆಯನ್ನು ತಮ್ಮ ಅಭಿಮಾನಿಗಳೊಂದಿಗೆ ತೀರಿಸಿಯೇ ಬಿಟ್ಟರು.
ಈ ಸಂದರ್ಭದಲ್ಲಿ ಸ್ಥಳಿಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಶೋಕಗೌಡ ಪಾಟೀಲ, ಬಿಜೆಪಿ ಕಾರ್ಯಕರ್ತ ಯಶವಂತ ಬಿರಾದಾರ, ಸ್ಥಳಿಯ ಭಕ್ತ ಸುಭಾಸ್ ಲಾಳಸೇರಿ ಸೇರಿದಂತೆ ಹಲವು ಭಕ್ತರು ಉಪಸ್ಥಿತರಿದ್ದರು.