ಬಿಜಾಪುರ: ಮಾರ್ಚ್ 25ರಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದೆ. ಶಿಕ್ಷಣ ಇಲಾಖೆ ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸೌಲಭ್ಯಗಳನ್ನು ಮಾಡಿಕೊಂಡಿದೆ ಎಂದು ತಿಳಿಸಿದೆ.
ಆದರೆ ಬಿಜಾಪುರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ವಿಕಲಾಂಗ ವಿದ್ಯಾರ್ಥಿ ಪರದಾಡಿದ ಘಟನೆ ನಡೆದಿದೆ. ವಿಕಲಾಂಗ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಸಹಾಯಕ ವಿದ್ಯಾರ್ಥಿ ನೀಡದೆ ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಆಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮೊಹಮ್ಮದ್ ಅಜ್ಲಾನ್ ನಾಯ್ಕೋಡಿ ಎಂಬ ವಿಕಲಾಂಗ ವಿದ್ಯಾರ್ಥಿ ಕೈಗಳ ಶಕ್ತಿ ಕಳೆದುಕೊಂಡಿದ್ದಾನೆ. ಆತನಿಗೆ ಬರೆಯಲು ಆಗಲ್ಲ. ಹೀಗಾಗಿ ಸಹಾಯಕ ವಿದ್ಯಾರ್ಥಿ ನೀಡಿ ಪರೀಕ್ಷೆ ಬರೆಸಬೇಕಿತ್ತು. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು ಸಹಾಯಕ ವಿದ್ಯಾರ್ಥಿ ಇಲ್ಲದೆ ಅಜ್ಲಾನ್ ಪರೀಕ್ಷೆಯನ್ನು ತಡವಾಗಿ ಬರೆಯುವಂತಾಗಿದೆ. ತಮ್ಮ ಮಗನಿಗೆ ಪರೀಕ್ಷೆ ಬರೆಯಲು ಆಗಲ್ಲ. ಸಹಾಯಕ ವಿದ್ಯಾರ್ಥಿಯನ್ನೂ ನೀಡಿಲ್ಲ ಎಂದು ವಿದ್ಯಾರ್ಥಿ ತಂದೆ ಪರೀಕ್ಷಾ ಕೇಂದ್ರದ ಬಳಿ ಕಣ್ಣೀರು ಹಾಕಿದ್ರು. ಸಹಾಯಕ ವಿದ್ಯಾರ್ಥಿಯನ್ನು ಕೊಡಲು ಮರೆತಿದ್ದ ಅಧಿಕಾರಿಗಳು ಒಂದು ಗಂಟೆ ತಡವಾಗಿ ಸಹಾಯಕ ವಿದ್ಯಾರ್ಥಿ ನೀಡಿ ಪರೀಕ್ಷೆ ಬರೆಸಿದ್ದಾರೆ.
ನಗರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿರೋ ವಿದ್ಯಾರ್ಥಿ ಮೊಹಮ್ಮದ್ ಅಜ್ಲಾನ್ ಸಹಾಯಕ ವಿದ್ಯಾರ್ಥಿ ಇಲ್ಲದ ಕಾರಣ ಪರೀಕ್ಷೆಯನ್ನು ಬರೆಯಲಾಗದೆ ಕುಳಿತಿದ್ದರು. ಸಹಾಯಕ ವಿದ್ಯಾರ್ಥಿ ನೀಡಲು ಕಳೆದ ಫೆಬ್ರವರಿಯಲ್ಲೇ ವಿದ್ಯಾರ್ಥಿಯ ಶಾಲೆಯವರು ಡಿಡಿಪಿಐ ಕಚೇರಿಗೆ ಮನವಿ ಮಾಡಿದ್ದರು. ಫೆಬ್ರವರಿಯಲ್ಲಿ ಮನವಿ ನೀಡಿದ್ದರೂ ಸಹಾಯಕ ವಿದ್ಯಾರ್ಥಿಗೆ ಅವಕಾಶ ನೀಡದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ಕೊನೆಗೆ ಒಂದು ಗಂಟೆ ತಡವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸಹಾಯಕ ವಿದ್ಯಾರ್ಥಿಗೆ ಅವಕಾಶ ನೀಡಿದರು. ಮುಂದಿನ ಪರೀಕ್ಷೆಗಳಿಗೆ ಈ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಪೋಷಕರು ಮನವಿ ಮಾಡಿದ್ದಾರೆ.
ಪರೀಕ್ಷೆ ಬರೆಯುವಾಗ ವಿದ್ಯಾರ್ಥಿ ಸಾವು
SSಐಅ ಪರೀಕ್ಷೆ ಬರೆಯುವಾಗ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ತುಮಕೂರು ಜಿಲ್ಲೆಯ ತುರುವೇಕೆರೆ ಸರಸ್ವತಿ ಬಾಲಕರ ಪ್ರೌಢಶಾಲೆಯಲ್ಲಿ ಘಟನೆ ನಡೆದಿದೆ. ಚಿಕ್ಕರಾಂಪುರ ನಿವಾಸಿ ಮೋಹನ್ ಮೃತಪಟ್ಟ ದುರ್ದೈವಿ. ನಿನ್ನೆ ಸರಸ್ವತಿ ಬಾಲಕರ ಪ್ರೌಢಶಾಲಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಮೋಹನ್ ಬಂದಿದ್ದ. ಪರೀಕ್ಷೆ ಬರೆಯುವಾಗ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆಸ್ಪತ್ರೆ ಸಾಗಿಸಲಾಯ್ತು, ಆದ್ರೆ, ಸಾಗಿಸುವ ಮಾರ್ಗಮಧ್ಯೆ ಮೋಹನ್ ಕುಮಾರ್ ಕೊನೆಯುಸಿರೆಳೆದಿದ್ದಾನೆ.