ಇಂಡಿ : ತಾಲೂಕಿನ ಅಹಿರಸಂಗ ಗ್ರಾಮದಲ್ಲಿ ಮಳೆ ಸುರಿಯುವ ಸಂದರ್ಭದಲ್ಲಿ ಗಿಡಕ್ಕೆ ಅಪ್ಪಳಿಸಿದ ಸಿಡಿಲಿನ ಹೊಡೆತಕ್ಕೆ 5 ಆಡುಗಳು ಸ್ಥಳದಲ್ಲೆ ಸಾವನ್ನಪ್ಪಿ ಇನ್ನೂ 5 ಮರಿಗಳು ಗಾಯಗೊಂಡ ಘಟನೆ ಇಂದು (ಶನಿವಾರದಂದು)ಮಧ್ಯಾಹ್ನ ನಡೆದಿದೆ.
ಈ ಗ್ರಾಮದ ಲಚ್ಯಾಣ ಗ್ರಾಮ ಸಂಪರ್ಕಿಸುವ ಮಾರ್ಗ ಮಧ್ಯದ ಸಂತೋಷ ಶಾಂತಪ್ಪ ಹೊನ್ನಳ್ಳಿ ಎಂಬುವರು ತಮ್ಮ ಉಪ ಜೀವನಕ್ಕಾಗಿ ತಮ್ಮ ತೋಟದ ವಸತಿಯಲ್ಲಿ ಬಬಲಿ ಗಿಡದ ಕೆಳಗಿನ ಪತ್ರಾಸ ಆಸರೆಯಲ್ಲಿ 30 ಆಡುಗಳನ್ನು ಸಾಕಿದ್ದರು.
ಆದರೆ ಆಕಸ್ಮಿಕವಾಗಿ ಇಂದು ಮಧ್ಯಾಹ್ನ 3.30ರ ಸುಮಾರಿಗೆ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಬಿರುಗಾಳಿಯಲ್ಲಿ ಸಿಡಿಲು ಗಿಡಕ್ಕೆ ಅಪ್ಪಳಿದ ಪರಿಣಾಮ ಗಿಡ ಮುರಿದು ಪತ್ರಾಸ್ ಮೇಲೆ ಬಿದ್ದಿದೆ. ಈ ಸಿಡಿಲಿನ ಹೊಡೆತಕ್ಕೆ 5 ಆಡುಗಳು ಸ್ಥಳದಲ್ಲೆ ಮೃತಪಟ್ಟರೆ, ಇನ್ನೂ 5 ಆಡುಗಳು ಮೆತ್ತಗಾಗಿವೆ. ಮತ್ತೆ ಇನ್ನುಳಿದ ಆಡುಗಳು ಓಡಿ ಹೋಗಿವೆ ಎಂದು ಆಡುಗಳ ಮಾಲಿಕ ಸಂತೋಷ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ತಲಾಟಿ ಬಿ.ಎಸ್. ಅವಜಿ, ಇಂಡಿ ಪಶು ಆಸ್ಪತ್ರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.