Gummata Nagari

Bijapur

ಬಂಜಾರ ಸಮಾಜದ ಬಗ್ಗೆ ಗೌರವ ಇದೆ ಎಂದ ಜಿಗಜಿಣಗಿ

ಬಿಜಾಪುರ: ಬಂಜಾರ ಸಮಾಜದ ಬಗ್ಗೆ ನನಗೆ ಮೊದಲಿನಿಂದಲೂ ಗೌರವ ಇದೆ. ಬಂಜಾರ ಸಮಾಜದವರು ಯಾರು? ಅವರ ವೋಟ್ ನನಗೆ ಬೇಡ ಎಂದು ಎಲ್ಲಿಯೂ ಹೇಳಿಕೆ ನೀಡಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಕೆಲವರು ದುರುದ್ದೇಶದಿಂದ ತಪ್ಪು ಸಂದೇಶವನ್ನು ಬಿತ್ತುತ್ತಿದ್ದಾರೆ’ ಎಂದು ಸಂಸದ ರಮೇಶ ಜಿಗಜಿಣಗಿ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿದ್ದಾರೆ.

‘ಬಂಜಾರ ಸಮಾಜದ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರು ಪಕ್ಷದ ಕಚೇರಿಗೆ ಮುತ್ತಿಗೆ ಹಾಕಿ ನನ್ನ ವಿರುದ್ಧ ಪ್ರತಿಭಟನೆ ನಡೆಸಿ ಅನಗತ್ಯ ಆರೋಪ ಮಾಡಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುವಾಗ ನಾನು ಬಂಜಾರ ಸಮಾಜಕ್ಕೆ ಅವಮಾನ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು. ‘ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ನಮ್ಮ ಜಿಲ್ಲೆಯವರಲ್ಲ ನೆರೆಯ ಬಾಗಲಕೋಟೆ ಜಿಲ್ಲೆಯಿಂದ ಕರೆತಂದಿದ್ದರು. ಅಭ್ಯರ್ಥಿ ಬದಲಿಸಿ ಎಂದು ಈಗ ಹೇಳುವ ಬದಲು ಪಕ್ಷಕ್ಕಾಗಿ ಶ್ರಮಿಸಿದರೆ ಭವಿಷ್ಯದಲ್ಲಿ ಅವರಿಗೆ ಅವಕಾಶಗಳು ಲಭಿಸುತ್ತವೆ ಎಂದು ಹೇಳಿಕೆ ನೀಡಿದ್ದೇನೆ’ ಎಂದು ತಿಳಿಸಿದರು.

 

‘ನನ್ನ ರಾಜಕೀಯ ಜೀವನದಲ್ಲಿ ಇದುವರೆಗೆ ಯಾವುದೇ ಸಮಾಜದವರಿಗೂ ಅನ್ಯಾಯ ಮಾಡಿಲ್ಲ ಅವಮಾನ ಮಾಡಿಲ್ಲ ಎಲ್ಲ ಸಮಾಜದವರನ್ನು ಹೆಗಲ ಮೇಲೆ ಹೊತ್ತುಕೊಂಡು ಗೌರವದಿಂದ ನಡೆದುಕೊಂಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು. ‘ಕಾಂಗ್ರೆಸ್‌ನವರ ದುರುದ್ದೇಶದ ರಾಜಕೀಯ ಅಪಪ್ರಚಾರಕ್ಕೆ ಬಂಜಾರ ಸಮಾಜದವರು ಕಿವಿಗೊಡಬಾರದು. ಸಮಾಜದೊಂದಿಗೆ ಸದಾಕಾಲ ಇರುತ್ತೇನೆ’ ಎಂದು ತಿಳಿಸಿದ್ದಾರೆ.

Most Popular

To Top
error: Content is protected !!