ಬಿಜಾಪುರ: ನಾರಾಯಣಪೂರ ಜಲಾಶಯದಿಂದ ಭೀಮಾನದಿಗೆ ಜನ ಜಾನುವಾರಗಳಿಗೆ ಕುಡಿಯುವ ಉದ್ದೇಶಕ್ಕಾಗಿ 1 ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಇಂಡಿ ತಾಲೂಕಿನ ಹಿಂಗಾಣಿ ಬ್ಯಾರೆಜ್ಗೆ ಇಂದು ಭೇಟಿ ನೀಡಿ ಪರಿಶೀಲಿಸಿದರು.
ಕುಡಿಯುವ ಉದ್ದೇಶಕ್ಕಾಗಿ ನೀರನ್ನು ಹರಿಸಲಾಗುತ್ತಿರುವುದರಿಂದ ಭೀಮಾನದಿ ನದಿ ನೀರನ್ನು ಅವಲಂಬಿಸಿದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯ ಸಮರ್ಪಕ ಸಾಕಾರಕ್ಕೆ ಅಧಿಕಾರಿಗಳು ತಕ್ಷಣದಿಂದಲೇ ಜಾಗೃತೆ ವಹಿಸಿಕೊಂಡು, ಕಡ್ಡಾಯವಾಗಿ ಯಾವುದೇ ಕಾರಣಕ್ಕೂ ನೀರು ಪೋಲಾಗದಂತೆ ಹಾಗೂ ಅಂತಿಮ ಸೂಚಿತ ಪ್ರದೇಶಗಳಿಗೆ ಕುಡಿಯುವ ನೀರು ತಲುಪುವಂತೆ ಆದ್ಯತೆ ನೀಡಿ ಕಾರ್ಯನ್ಮೋಮುಖರಾಗಬೇಕು ಎಂದು ಸೂಚಿಸಿದರು.
ಅನ್ಯ ಚಟುವಟಿಕೆಗಳಿಗೆ ನೀರನ್ನು ಬಳಸುವುದನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಡಿಸೇಲ್, ಮೋಟಾರು ಯಂತ್ರಗಳ ಮೂಲಕ ನೀರನ್ನು ಎತ್ತುವುದನ್ನು ತಡೆಯಬೇಕು. ಹಗಲು-ರಾತ್ರಿ ಪಾಳಿಯಲ್ಲಿ ವಾಚ್-ವಾರ್ಡ ಮಾಡಬೇಕು. ನದಿ ಪಾತ್ರಗಳಲ್ಲಿ ಬರುವ ಬ್ಯಾರೇಜ್ಗಳು ತುಂಬಿಸುವಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಈ ವೇಳೆ ಇಂಡಿ ಉಪವಿಭಾಗಾಧಿಕಾರಿ ಅಭೀದ್ ಗದ್ಯಾಳ, ತಹಶೀಲ್ದಾರ ಮಂಜುಳಾ ನಾಯಕ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.