ಬೆಂಗಳೂರು: ರಾಜ್ಯ ಸಭಾ ಚುನಾವಣೆಯಲ್ಲಿ ಜಯಗಳಿಸಿದ ನಾಸಿರ್ ಹುಸೇನ್ ಪರ ವಿಧಾನ ಸೌಧದಲ್ಲಿ ಘೋಷಣೆ ಕೂಗಿದ್ದನ್ನೇ ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಲಾಗಿದೆ ಎಂದು ವಿರೋಧ ಪಕ್ಷಗಳು ರಾದ್ದಾಂತ ಎಬ್ಬಿಸುತ್ತಿವೆ. ವಿಧಾನ ಸಭಾ ಕಲಾಪದ ಅಮೂಲ್ಯ ಸಮಯವನ್ನು ಹರಣ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಈ ಪ್ರಕರಣದ ಸತ್ಯಾಸತ್ಯತೆ ಅರಿಯುವ ಕುತೂಹಲವಿದೆ. ಸರಕಾರ ಅದನ್ನು ಬಹಿರಂಗ ಗೊಳಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಆಗ್ರಹಿಸಿದ್ದಾರೆ.
ಈ ಘೋಷಣೆ ಗಳ ವಾಸ್ತವದ ಬಗ್ಗೆ ತ್ವರಿತಗತಿಯಲ್ಲಿ ತನಿಖೆ ನಡೆಸಲು ಸಭಾಪತಿಗಳು ಆದೇಶಿಸಿ. ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಅದರ ಹಿಂದಿನ ಶಕ್ತಿಗಳನ್ನು ಪತ್ತೆ ಹಚ್ಚಬೇಕು.ಇದನ್ನು ರಾಜಕೀಯ ಲಾಭಗಳಿಸಲು ಯಾರೂ ಬಳಸಬಾರದು. ಒಂದು ವೇಳೆ ಕೆಲ ಮಾಧ್ಯಮಗಳು ಕಪೋಲ ಕಲ್ಪಿತ ಸುಳ್ಳು ಹರಡಿದ್ದರೆ ಅಂತಹ ಮಾಧ್ಯಮ ಸಂಸ್ಥೆಯ ವಿರುದ್ಧ ಸರಕಾರ ವಿಧಾನ ಸೌದದೊಳಗೆ ಪ್ರವೇಶಿಸದಂತೆ ನಿರ್ಬಂಧ ಹೇರಬೇಕು. ವಿದಾನ ಸಭೆಯ ಕಲಾಪದ ಸಮಯ ವ್ಯರ್ಥವಾಗಲು ಕಾರಣವಾದ ಆ ವೆಚ್ಚವನ್ನು ಅವರಿಂದ ಭರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.