ಬಿಜಾಪುರ: ರಾಜ್ಯ ಸರ್ಕಾರ ಮಹತ್ವ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಶಕ್ತಿ ಯೋಜನೆ ಜಾರಿಗೆ ತಂದಿದೆ. ರಾಜ್ಯದ ಮಹಿಳೆಯರು ಬರಿ ತಮ್ಮ ಆಧಾರ ಕಾರ್ಡ ತೋರಿಸಿದರೆ ಸಾಕು ಪ್ರಯಾಣ ಉಚಿತ. ಕಳ್ಳರ ಮಹಿಳಾ ಗ್ಯಾಂಗ್ ಆಧಾರ ಕಾರ್ಡ ತೋರಿಸಿ ಬಸ್ನಲ್ಲಿ ಪ್ರಯಾಣಿಸಿ, ಮಹಿಳೆಯರ ಬಂಗಾರದ ಆಭರಣ ಕಳವು ಮಾಡಿ ಪರಾರಿಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನಿಸುತ್ತಿದ್ದ ಆ ಗ್ಯಾಂಗ್ ಹೆಡೆಮುರಿ ಕಟ್ಟುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಆಧಿಕಾರಕ್ಕೆ ಬಂದಿದ್ದೇ ತಡಾ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಮೊದಲು ಜಾರಿ ಮಾಡಲಾಯಿತು. ಇದರಿಂದ ಫುಲ್ ಖುಷಿಯಾದ ಮಹಿಳಾ ಮಣಿಗಳು ತಾ ಮುಂದೆ ನಾ ಮುಂದೆ ಎಂದು ಉಚಿತ ಪ್ರಯಾಣ ಮಾಡಿ ಖುಷಿ ಪಟ್ಟರು. ಈ ರೀತಿ ಶಕ್ತಿ ಯೋಜನೆಯ ಕುರಿತು ಮಹಿಳೆಯರು ಅಷ್ಟೇ ಅಲ್ಲಾ ಕೆಲ ಖದೀಮರ ಗ್ಯಾಂಗ್ ಸಹ ಒಳಗೊಳಗೇ ಖುಷಿ ಪಟ್ಟರು.
ಅದರಲ್ಲೂ ನೆರೆಯ ಮಹಾರಾಷ್ಟ್ರದ ಹಡಪಸರ್ ಮೂಲದ ಕಳ್ಳರ ಗ್ಯಾಂಗ್ ಹಾಗೂ ನೆರೆಯ ಕಲಬುರಗಿ ನಗರದ ಬಾಪು ನಗರದ ಮಹಿಳಾ ಕಳ್ಳಿಯರ ಗ್ಯಾಂಗ್ ಸಹ ಶಕ್ತಿ ಯೋಜನೆಯನ್ನೇ ಬಂಡವಾಳ ಮಾಡಿಕೊಂಡರು ಬಿಟ್ಟರು! ಈ ಗ್ಯಾಂಗ್ ನವರು ಬಿಜಾಪುರ ಜಿಲ್ಲೆಯನ್ನು ಟಾರ್ಗೆಟ್ ಮಾಡಿಕೊಂಡು ನಗರದ ಕೇಂದ್ರ ಬಸ್ ನಿಲ್ಧಾಣ ಹಾಗೂ ಸ್ಯಾಟ್ ಲೈಟ್ ಬಸ್ ನಿಲ್ದಾಣಗಳಲ್ಲಿ ತಮ್ಮ ಕಳ್ಳ ವೃತ್ತಿಯನ್ನು ಶುರು ಮಾಡಿದ್ದರು.
ಶಕ್ತಿ ಯೋಜನೆಯಿಂದ ಹೆಚ್ಚು ಮಹಿಳಾ ಪ್ರಯಾಣಿಕರು ಬಸ್ ಹತ್ತೋವಾಗ ಹಾಗೂ ಪ್ರಯಾಣ ಮಾಡೋವಾಗ ತಮ್ಮ ಕೈಚಳಕ ತೋರುತ್ತಿದ್ದರು. ತುಂಬಾ ರಶ್ ಆಗಿರೋ ಬಸ್ ಗಳಲ್ಲಿ ಹತ್ತುತ್ತಿದ್ದ ಈ ಮಹಿಳಾ ಕಳ್ಳರು ಮಹಿಳಾ ಪ್ರಯಾಣಿಕರ ಕೈಯ್ಯಲ್ಲಿದ್ದ ಚಿನ್ನ ಬಳೆಗಳನ್ನು ಸದ್ದಿಲ್ಲೇ ಕಟ್ ಮಾಡಿಕೊಂಡು ಪರಾರಿಯಾಗುತ್ತಿದ್ದರು.
ಇನ್ನು ಕೆಲ ಮಹಿಳಾ ಹಾಗೂ ಪುರುಷ ಕಳ್ಳರು ಬಸ್ ಹತ್ತುವ ಧಾವಂತದಲ್ಲಿ ತಳ್ಳಾಟ ನೂಕಾಟ ಮಾಡಿ ಮಹಿಳಾ ಪ್ರಯಾಣಿಕರ ಕೈಗಳಲ್ಲಿರೋ ಚಿನ್ನದ ಬಳೆಗಳು ಅಂದರೆ ಪಾಟಲಿ ಹಾಗೂ ಬಿಲವಾರ್ ಹಾಗೂ ಇತರೆ ಚಿನ್ನದ ಬಳೆಗಳನ್ನು ಕತ್ತರಿಸಿಕೊಂಡು ಯಾಮಾರಿಸಿ ಪರಾರಿಯಾಗಿ ಬಿಡುತ್ತಿದ್ದರು. ಇಂಥ ಪ್ರಕರಣಗಳನ್ನು ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮಹಾಂತೇಶ ದಾಮನ್ನವರ ಬಯಲು ಮಾಡಿದ್ದಾರೆ.
ಮಹಾರಾಷ್ಟ್ರದ ಹಡಪಸರ ಮೂಲದ ಮೂವರು ಪುರುಷ ಕಳ್ಳರು ಹಾಗು ಕಲಬುರಗಿಯ ಬಾಪೂ ನಗರದ ಮೂವರ ಮಹಿಳಾ ಕಳ್ಳಿಯರನ್ನು ಅಂದರ್ ಮಾಡಿದ್ದಾರೆ. ಕಲಬುರಗಿ ಪಟ್ಟಣದ ಬಾಪೂ ನಗರದ ಗಂಗೂಬಾಯಿ ಕಾಳೆ (56 ) ನರಸಮ್ಮ ಪಾಟೀಲ್ (44 ) ಕರೀಸ್ಮಾ ಉಪಾದ್ಯೆ (35) ಈ ಮೂವರು ಮಹಿಳಾ ಕಳ್ಳಿಯರು ಸೇರಿದಂತೆ ನೆರೆಯ ಮಹಾರಾಷ್ಟ್ರದ ಹಡಪಸರ ಮೂಲದ ಶಹನಾಜ್ ಶೇಖ್ (23) ವಿಕ್ಕಿ ನಾಯರ (35) ನಿಲೇಶ ಜಾಧವ್ (34) ಬಂಧಿತರು. ಈ ಆರು ಜನ ಕದೀಮರ ಬಳಿ 234 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನದ ಬಳೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಋಷಿಕೇಶ ಸೋನೆವಣೆ ಮಾಹಿತಿ ನೀಡಿದ್ದಾರೆ.
ಶಕ್ತಿ ಯೋಜನೆಯನ್ನೇ ತಮ್ಮ ಕಳ್ಳತನಕ್ಕೆ ಶಕ್ತಿ ಮಾಡಿಕೊಂಡ ಖತರ್ನಾಕ್ ಗ್ಯಾಂಗ್ ನ್ನು ಹೆಡೆಮುರಿ ಕಟ್ಟಿದ ಗಾಂಧಿ ಚೌಕ್ ಪೊಲೀಸರು ಹಾಗು ಜಿಲ್ಲಾ ಪೊಲೀಸರ ತನಿಖೆಗೆ ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣದ ಆಸೆಯಿಂದ ಮಹಿಳೆಯರು ಹೆಚ್ಚು ಹೆಚ್ಚು ಪ್ರಮಾಣ ಮಾಡುತ್ತಿದ್ದರು. ಇದೇ ರೀತಿ ಬಸ್ ಪ್ರಯಾಣದಲ್ಲಿ ಹೆಚ್ಚಿನ ರಶ್ ಇದ್ದಲ್ಲಿ ಹಾಗು ಬಸ್ ಹತ್ತೋವಾಗಿನ ಭರದಲ್ಲಿ ಈ ಗ್ಯಾಂಗ್ ಮಹಿಳೆಯರ ಕೈಯ್ಯಲ್ಲಿದ್ದ ಚಿನ್ನದ ಬಳೆಗಳನ್ನು ಕಟ್ ಮಾಡಿಕೊಂಡು ಜೂಟ್ ಹೇಳುತ್ತಿತ್ತು. ಕಷ್ಟಪಟ್ಟು ಮಹಿಳೆಯರು ಚಿನ್ನದ ಒಡವೆಗಳನ್ನು ಮಾಡಿಸಿಕೊಂಡಿರುತ್ತಾರೆ. ಅವುಗಳನ್ನೇ ಕಟ್ ಮಾಡಿಕೊಂಡು ಹೋಗುತ್ತಿದ್ದ ಗ್ಯಾಂಗ್ ಈಗ ಅಂದರ್ ಆಗಿದ್ದು ಸಮಾಧಾನಕರ ಬೆಳವಣಿಗೆಯಾಗಿದೆ. ಈ ಗ್ಯಾಂಗ್ ನನ್ನು ಅರೆಸ್ಟ್ ಮಾಡಿದ್ದಕ್ಕೆ ಜಿಲ್ಲಾ ಪೊಲೀಸ್ ಇಲಾಖೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯ ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ ಸ್ಯಾಟ್ ಲೈಟ್ ಬಸ್ ನಿಲ್ದಾಣದಲ್ಲಿ ನಡೆದಿದ್ದ ಬಳೆಗಳನ್ನು ಕಟ್ ಮಾಡಿಕೊಂಡು ಕದ್ದು ಪರಾರಿಯಾಗಿದ್ದರ ಬಗ್ಗೆ ಪ್ರಕರಣಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ಗಾಂಧಿ ಚೌಕ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮಹಾಂತೇಶ ದಾಮಣ್ಣವರ ಹಾಗೂ ತಂಡ ಕದೀಮರ ಬಂಧಿಸಿದೆ. ಖದೀಮರಿಂದ ವಶಪಡಿಸಿಕೊಂಡ ಚಿನ್ನದ ಬಳೆಗಳನ್ನು ಕಾನೂನು ಪ್ರಕಾರ ಮಲೀಕರಿಗೆ ನೀಡಲಾಗುತ್ತದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು ಇನ್ನೂ ಹೆಚ್ಚಿನ ತನಿಖೆ ನಡೆದಿದೆ.