ಗೋಡೆಯ ಮೇಲೆ ಅರಳಿದ ಪರಮಪೂಜ್ಯ ಸಿದ್ದೇಶ್ವರ ಶ್ರೀ ಭಾವಚಿತ್ರ
ಬಿಜಾಪುರ: ಇಲ್ಲಿನ ಜ್ಞಾನಯೋಗಾಶ್ರಮದ ಶತಮಾನದ ಶ್ರೇಷ್ಠ ಸಂತ, ಸರಳ ಜೀವಿ, ನಡೆದಾಡುವ ಸಂತ, ಕಾಯಕ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು ನಮ್ಮೆಲ್ಲರನ್ನ ಅಗಲಿ ವಸಂತ ಕಳೆದಿದೆ.
ಆದರೆ ಇಂದಿಗೂ ಅವರ ವಿಚಾರಧಾರೆಗಳು ಶ್ರೀಗಳ ಭಕ್ತರ ಮನದಲ್ಲಿ ಅಚ್ಚೊತ್ತಿ ಬಿಟ್ಟಿದೆ. ಅದೆಷ್ಟೋ ಭಕ್ತರು ಶ್ರೀಗಳ ಭಾವಚಿತ್ರವನ್ನು ಕಂಡರೆ ಕೈ ಮುಗಿದು ನಮಿಸುತ್ತಾರೆ. ಇದ್ದಕ್ಕೆ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಭಕ್ತರೊಬ್ಬರು ಸಿದ್ದೇಶ್ವರ ಶ್ರೀಗಳ ಸುಂದರ ಚಿತ್ರವನ್ನು ಬಿಡಿಸುತ್ತಿದ್ದಂತ ಕಲಾವಿದನ ಕಲೆಯನ್ನು ಮೆಚ್ಚಿ ಕಿರು ಕಾಣಿಕೆಯನ್ನು ನೀಡಿದ್ದಾರೆ. ಈ ಸುಂದರ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸಿದ್ದೇಶ್ವರ ಶ್ರೀಗಳ ಚಿತ್ರವನ್ನು ಬಿಡಿಸುತ್ತಿರುವ ಕಲಾವಿದನಿಗೆ ಹಿರಿಯರೊಬ್ಬರು ಕಿರು ಕಾಣಿಕೆಯನ್ನು ನೀಡಿದಂತಹ ಸುಂದರ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “ಸಿದ್ದೇಶ್ವರ ಅಜ್ಜಾರ ಅಂದ್ರಾ ನಮ್ಮ ಜನಕ್ಕಾ ಎಷ್ಟ್ ಪ್ರೀತಿ ನೋಡ್ರಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಬಿಜಾಪುರ ನಗರದ ಸಿಂಗದಿಯ ಬೈಪಾಸ್ ಬ್ರಿಡ್ಜ್ ಗೋಡೆಯ ಮೇಲೆ ಕಲಾವಿದರೊಬ್ಬರು ಶತಮಾನದ ಸಂತ ಮತ್ತು ಆಧ್ಯಾತ್ಮಿಕ ದಿವ್ಯ ಚೇತನ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಚಿತ್ರವನ್ನು ಬಿಡಿಸುತ್ತಿರುವ ದೃಶ್ಯವನ್ನು ಕಾಣಬಹುದು.
ಆ ಸಂದರ್ಭದಲ್ಲಿ ಅಯ್ಯೋ ಈ ಯುವಕ ಗುರುಗಳ ಚಿತ್ರವನ್ನು ಅದೆಷ್ಟು ಸುಂದರವಾಗಿ ಬಿಡಿಸಿದ್ದಾನಲ್ಲವೇ ಎನ್ನುತ್ತಾ ಬಸ್ಸಿನಲ್ಲಿ ಕುಳಿತಿದ್ದಂತಹ ಹಿರಿಯರೊಬ್ಬರು ಶ್ರೀಗಳ ಚಿತ್ರವನ್ನೇ ನೋಡುತ್ತಾ ಕುಳಿತಿರುತ್ತಾರೆ. ನಂತರ ನಮ್ಮ ಗುರುಗಳ ಅದ್ಭುತ ಚಿತ್ರ ಬಿಡಿಸಿದ ಕಲಾವಿದನಿಗೆ ನನ್ನ ಕೈಲಾಗುವಷ್ಟು ಕಿರು ಕಾಣಿಕೆಯನ್ನು ನೀಡಬೇಕೆಂದು ಒಬ್ಬ ಯುವಕನ ಕೈಯಲ್ಲಿ 20 ರೂಪಾಯಿ ಕೊಟ್ಟು ಈ ಕಾಣಿಕೆಯನ್ನು ಆ ಕಲಾವಿದನಿಗೆ ಕೊಡಿ ಎಂದು ಹೇಳುತ್ತಾರೆ. ಚಿತ್ರ ಕಲಾವಿದ ಮನಸ್ಪೂರ್ವಕವಾಗಿ ತಾತಪ್ಪನ ಕಾಣಿಕೆಯನ್ನು ಸ್ವೀಕಾರ ಮಾಡುವಂತಹ ಸುಂದರ ದೃಶ್ಯವನ್ನು ಕಾಣಬಹುದು.
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಒಂದುವರೆ ಲಕ್ಷಕ್ಕೂ ಅಧಿಕ ಲೈಕ್ಳನ್ನು ಪಡೆದುಕೊಂಡಿದೆ. ಹಲವಾರು ಕಾಮೆಂಟ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಅವರ ಮನಸಲ್ಲಿ ಅಷ್ಟೇ ಅಲ್ಲ ನಮ್ಮೆಲ್ಲರ ಮನಸಲ್ಲಿ ಸದಾ ಶಾಶ್ವತ ಸಿದ್ದೇಶ್ವರ ಸ್ವಾಮಿಗಳುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕೊಟ್ಟಿರುವ ಹಣ ಸಣ್ಣ ಮೌಲ್ಯದ್ದಾಗಿರಬಹುದು, ಆದರೆ ಕಾಣಿಕೆ ಕೊಟ್ಟವರು ಹೃದಯವಂತರುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹೃದಯವಂತʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಸುಂದರವಾದ ವಿಡಿಯೋಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.