Gummata Nagari

Bijapur

ಕೂಡಲ ಸಂಗಮ ಶ್ರೀಗೆ ನಿರಾಣಿ ಎಚ್ಚರಿಕೆ

ಬಾಗಲಕೋಟೆ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅದರ ಕಾವು ಜೋರಾಗಿದೆ. ಉಭಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು, ಆರೋಪ-ಪ್ರತ್ಯಾರೋಪಗಳ ಸುರುಮಳೆಗೈಯುತ್ತಿದ್ದಾರೆ. ಅದರಂತೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಮುರುಗೇಶ್ ನಿರಾಣಿ ನಡುವೆ ಜಾತಿ ಸಮರ ಶುರುವಾಗಿದ್ದು, ಇದರ ಮಧ್ಯೆ ಬಸವಜಯಮೃತ್ಯುಂಜಯ ಸ್ವಾಮೀಜಿ ಆಗಮಿಸಿ ಹೆಬ್ಬಾಳ್ಕರ್ ಪರ ನಿಂತಿದ್ದಾರೆ. ‘ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಸಮುದಾಯದವರು, ಯಾರೊ ಒಬ್ಬರು ಏನೂ ಹೇಳಿದರೆ ಪ್ರತಿಕ್ರಿಯೆ ಕೊಡಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ. ಇದಕ್ಕೆ ನಿರಾಣಿ, ‘ಯಾರೊ ಒಬ್ಬರು ಅಲ್ಲ, ನಾನೇ ಹೇಳಿದ್ದೇನೆ ಎಂದು ಕಿಡಿಕಾರಿದ್ದಾರೆ.

ಬಾಗಲಕೋಟೆ ತಾಲ್ಲೂಕಿನ ಕಲಾದಗಿಯಲ್ಲಿ ಮಾತನಾಡಿದ ನಿರಾಣಿ, ‘ಕೂಡಲಪಂಚಮಸಾಲಿ ಪೀಠದ ಸ್ವಾಮೀಜಿಯವರೇ ಒಂದು ಮಾತು ಹೇಳ್ತಿನಿ ನಿಮಗೆ, ‘ನನ್ನ ವ್ಯಯಕ್ತಿಕವಾಗಿ ಇನ್ಮುಂದೆ ಮಾತಾಡಿದರೆ, ನಿಮ್ಮವು ನೂರಾರು ವಿಷಯಗಳು ನನ್ನ ಕಡೆ ಇವೆ. ಸಮಾಜದವರು ಮಾತಾಡಬಾರದು ಎಂದು ಗೌರವ ಕೊಟ್ಟು ಸುಮ್ಮನಿದ್ದೇವೆ. ಅದು ನಮ್ಮ ದೌರ್ಬಲ್ಯವಲ್ಲ, ಮಾತಾಡೋದಕ್ಕೆ ಸಾಕಷ್ಟು ಪಾಯಿಂಟ್ ಇವೆ. ಇದೆಲ್ಲ ಬಿಟ್ಟು ಸಮಾಜಕ್ಕೆ ಮೀಸಲಾತಿ ಕೊಡಿಸೋದರ ಕಡೆ ಗಮನ ಕೊಟ್ಟು, ಪಕ್ಷದ ಪರ ಪ್ರಚಾರ ಮಾಡೋದನ್ನು ಬಿಡಿ ಎಂದು ಖಡಕ್ ತಿರುಗೇಟು ನೀಡಿದ್ದಾರೆ.

ಜೊತೆಗೆ ಬಸವಜಯಮೃತ್ಯುಂಜಯ ಸ್ವಾಮೀಜಿ, ‘ಮೃಣಾಲ್ ಹೆಬ್ಬಾಳಕರ್ ಯಾರು ಎಂದು ಬಾಯಿ ಬಿಡಬೇಕು. ಜಗದೀಶ್ ಶೆಟ್ಟರ್ ಹಾಗೂ ಮೃಣಾಲ್ ಇಬ್ಬರು ಒಂದೆ ಸಮಾಜದವರು. ನೀವೇಕೆ ಅಲ್ಲಿ ಪ್ರಚಾರ ಮಾಡುತ್ತಿದ್ದೀರಿ. ನಿಮ್ಮ ಸಮಾಜದವರು ಇದ್ದಲ್ಲಿ ಹೋಗಿ ಪ್ರಚಾರ ಮಾಡಿ. ಆದರೆ, ಸುಳ್ಳು ಹೇಳಿ ಸಪೋರ್ಟ್ ಮಾಡೋದು ಯಾವ ನ್ಯಾಯ. ನಾವು ನಮ್ಮ ಸರಕಾರ ಇದ್ದಾಗ ಪಂಚಮಸಾಲಿ ಸಮಾಜಕ್ಕೆ 2ಡಿ ಮಾಡಿದ್ದೇವೆ. ಜಾತಿ ಕಾಲಂನಲ್ಲಿ ಸೇರಿಸಿದ್ದೇವೆ. ಇವತ್ತು ಅವರ ಜೊತೆ ಬಾಲ ಬಡಿದುಕೊಳ್ಳುತ್ತಾ ಕಾಂಗ್ರೆಸ್ ಎಜೆಂಟ್‌ರಾಗಿ ಕೆಲಸ ಮಾಡುತ್ತಿದ್ದೀರಾ ಎಂದು ಕಿಡಿಕಾರಿದರು.

ಜಾತಿ ಖಾಲಂನಲ್ಲಿ ಪಂಚಮಸಾಲಿ ಬಿಟ್ಟು ಹೋಗಿತ್ತು. ಅದನ್ನು ಸೇರಿಸಿದ್ದು ನಾವು, 2 ಡಿ ಕೊಟ್ಟಿದ್ದು ಬಿಜೆಪಿ. ಆದರೆ, ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸ್ವಾಮೀಜಿ ನಮ್ಮ ಸರಕಾರವಿದ್ದಾಗ ಎಷ್ಟು ಪ್ರತಿಭಟನೆ ಮಾಡಿದರು. ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು.

ಆಗ ಲಕ್ಷ್ಮಿ ಅಕ್ಕ, ಅಣ್ಣ ನಮಗೆ 2 ಡಿ ಒಪ್ಪಿಗೆ ಇಲ್ಲ. ನಿಮ್ಮ ಸರಕಾರದಲ್ಲಿ 2ಎ ಮೀಸಲಾತಿ ಕೊಟ್ಟರೆ ಬೆಳಗಾವಿ ಕುಂದಾ ಕೊಟ್ಟು ಸನ್ಮಾನ ಮಾಡ್ತಿನಿ. ನಿಮಗೆ ಆಗದೆ ಇದ್ರೆ, ನಮ್ಮ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳೊಳಗೆ 2ಎ ಕೊಡ್ತೀವಿ. ಆಗ ನನಗೆ ಒಂದು ಜೊತೆ ಬಂಗಾರದ ಬಳೆ ಹಾಕಿ ಸಮಾಜದ ಹಿರಿಯರ ಮುಂದೆ ಸನ್ಮಾನ ಮಾಡಬೇಕು ಎಂದು ಓಪನ್ ಚಾಲೆಂಜ್ ಮಾಡಿದ್ದರು. ಅದರ ಸಾನಿಧ್ಯವನ್ನೇ ಸ್ವಾಮೀಜಿ ವಹಿಸಿಕೊಂಡಿದ್ದರು. ಈಗ ಸರಕಾರ ಬಂದು ಆರು ತಿಂಗಳು ಆಯಿತು.

ಸ್ವಾಮೀಜಿಗಳೇ ನೀವು ಒಂದು ಸರಕಾರ ಇದ್ದಾಗ ಒಂದು ತರಹ. ಇನ್ನೊಂದು ಸರಕಾರ ಇದ್ದಾಗ ಮತ್ತೊಂದು ತರಹ ದ್ವಂಧ್ವ ನೀತಿಮಾಡಬೇಡಿ. ಎರಡು ಸರಕಾರ ನಿಮಗೆ ಎರಡು ಕಣ್ಣಿದ್ದಂತೆ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಮಾಡಬೇಡಿ. ನಮ್ಮ ಸರಕಾರ ಇದ್ದಾಗ ಮುತ್ತಿಗೆ ಹಾಕೋದು ಮಾಡಿದ್ರಿ, ಕಾಂಗ್ರೆಸ್ ಸರಕಾರ ಬಂದು ಒಂದು ವರ್ಷ ಆದರೂ ಸಹಿತ ನಿದ್ದೆ ಹತ್ತಿದವರ ಹಾಗೆ ನಾಟಕ ಮಾಡಿ ಮಲಗಿಕೊಳ್ಳುವ ಹಾಗೆ ಮಾಡಬೇಡಿ ಎಂದರು.

ಲಕ್ಷ್ಮಿ ಹೆಬ್ಬಾಳಕರ್ ಗಂಡ ಬಣಜಿಗ, ಹುಟ್ಟುವ ಮಗನಿಗೆ ತಂದೆ ಮನೆ ಹೆಸರು ಬರುತ್ತದೆ. ಆ ಪ್ರಕಾರ ಮೃಣಾಲ್ ತಂದೆ ಬಣಜಿಗ ಸಮುದಾಯಕ್ಕೆ ಸೇರ್ತಾರೆ. ಸ್ವಾಮೀಜಿ ಇದಕ್ಕೆ ಉತ್ತರ ಹೇಳಿ. ನಾನು ಸ್ವಾಮೀಜಿ ವೈರಿ ಅಲ್ಲ, ಲಕ್ಷ್ಮಿ ಅಕ್ಕನ ವೈರಿಯೂ ಅಲ್ಲ. ಸುಳ್ಳು ಹೇಳಿ ಯಾಕೆ ಮೋಸ ಮಾಡ್ತಿದಿರಿ ಎಂದು ವಾಗ್ದಾಳಿ ನಡೆಸಿದರು.

Most Popular

To Top
error: Content is protected !!